ತ್ಯಾಗ ಮತ್ತು ಸೇವೆ : ವಿವೇಕ ವಿಚಾರ

vivi3ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಗೆ ನೀವು ಸಹಾಯ ಮಾಡಬೇಕೆಂದಿದ್ದರೆ ಮೊದಲು ನಿಮ್ಮ ಸ್ವಾರ್ಥ ಹೋಗಬೇಕು. ಹೌದು. ಕ್ರಿಸ್ತನು ಹೇಳುವಂತೆ ನೀವು ದೇವರನ್ನೂ ಸಂಪತ್ತನ್ನೂ ಒಟ್ಟಿಗೆ ಒಲಿಸಿಕೊಳ್ಳಲಾರಿರಿ. ಒಟ್ಟಿಗೆ ಪೂಜಿಸಲಾರಿರಿ. ಜನರು ತಮ್ಮ ಸ್ವಂತ ಮೋಕ್ಷಕ್ಕಾಗಿ ಮಾತ್ರ ಐಹಿಕ ಬಿಡುತ್ತಾರೆ. ಎಲ್ಲವನ್ನೂ ತ್ಯಜಿಸಿಬಿಡಿ. ನಿಮ್ಮ ಸ್ವಂತ ಮೋಕ್ಷವನ್ನೂ ಬಿಸಾಡಿ ಹೋಗಿ, ಇತರರ ಸೇವೆ ಮಾಡಿ.

~

ಈಗ ನಾವು ಕಲಿತುಕೊಳ್ಳಬೇಕಾದ ಇನ್ನೊಂದು ಮುಖ್ಯವಾದ ವಿಷಯವಿದೆ.   ನಿಜವಾಗಿಯೂ ನೀವು ಇನ್ನೊಬ್ಬರಿಗೆ ಸಹಾಯ ಮಾಡಲಾರಿರಿ. ನಾವು ಪರಸ್ಪರ ಏನು ಮಾಡಬಲ್ಲೆವು? ನೀವು ನಿಮ್ಮ ಜೀವನ ಧರ್ಮಕ್ಕೆ ತಕ್ಕಂತೆ ಬೆಳೆಯುತ್ತಿರುವಿರಿ. ನಾನು ನನ್ನ ಜೀವನಧರ್ಮಕ್ಕೆ ತಕ್ಕಂತೆ ಬೆಳೆಯುತ್ತಿರುವೆನು. ಕೊನೆಗೆ ದಾರಿಯೆಲ್ಲ ಒಂದೇ ಗುರಿ ಸೇರುವುದೆಂದು ತಿಳಿದಾಗ ಮಾತ್ರ ನಿಮಗೆ ಸ್ವಲ್ಪ ಸಹಾಯ ಮಾಡಲು ನನಗೆ ಸಾಧ್ಯ. ಇದೊಂದು ನಿರಂತರ ಬೆಳವಣಿಗೆ. ಯಾವ ಜನಾಂಗದ ಸಂಸ್ಕೃತಿಯೂ ಕೂಡ ಇನ್ನೂ ಪೂರ್ಣವಾಗಿಲ್ಲ. ಆ ಸಂಸ್ಕೃತಿಗೆ ನೀವು ಸ್ವಲ್ಪ ಸಹಾಯ ಮಾಡಿದರೆ ಅದು ತನ್ನ ಗುರಿಯೆಡೆಗೆ ತಾನೇ ಬರುವುದು. ನೀವು ಅದನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸಬೇಡಿ. ಒಂದು ಜನಾಂಗದ ಸಂಸ್ಥೆ, ಆಚಾರ, ವ್ಯವಹಾರಗಳನ್ನು ತೆಗೆದರೆ ಉಳಿಯುವುದೇನು? ಇವುಗಳೇ ಜನಾಂಗವನ್ನು ಒಂದುಗೂಡಿಸಿರುವುದು.

~

ನಿಮಗೆ ಸಾಧ್ಯವಾದಾಗೆಲ್ಲ ಸಹಾಯ ಮಾಡಿ. ಆದರೆ ನಿಮ್ಮ ಉದ್ದೇಶ ಏನೆಂಬುದನ್ನು ಗಮನಿಸಿ. ಅದು ನಿಸ್ವಾರ್ಥದಿಂದ ಕೂಡಿದ್ದರೆ, ಸಹಾಯ ಪಡೆಯುವವನಿಗೆ ಅದು ಆನಂದವನ್ನು ನೀಡುವುದು.

ಸ್ವಾರ್ಥವಿಲ್ಲದಿರುವಿಕೆಯೇ ಅಧಿಕ ಫಲವನ್ನು ಕೊಡತಕ್ಕಂತಹದು. ಆದರೆ ಅದನ್ನು ಅಭ್ಯಾಸ ಮಾಡುವಷ್ಟು ತಾಳ್ಮೆ ಜನರಿಗೆ ಇಲ್ಲ. ಆರೋಗ್ಯದ ದೃಷ್ಟಿಯಿಂದಲೂ ತಾಳ್ಮೆಯಿಂದ ಹೆಚ್ಚಿನ ಫಲಗಳುಂಟು. ಆದರೂ ಜನ ಅದನ್ನು ಅಭ್ಯಾಸ ಮಾಡಿಕೊಳ್ಳಲಾರರು. ನಿಸ್ವಾರ್ಥ, ಪ್ರೇಮ, ತಾಳ್ಮೆಗಳೆಲ್ಲದರಲ್ಲೂ ಶಕ್ತಿಯ ಅಭಿವ್ಯಕ್ತಿ ಅಡಗಿರುತ್ತದೆ. ಅದೇ ವೇಳೆಗೆ ಸ್ವಾರ್ಥದಿಂದ ಕೂಡಿದ ಶಕ್ತಿಯೆಲ್ಲವೂ ವ್ಯಯವಾಗುತ್ತದೆ ಹೊರತು ಪ್ರತಿಫಲ ರೂಪವಾಗಿ ಹಿಂದಕ್ಕೆ ಮರಳಿ ಬರುವುದಿಲ್ಲ.

ಆದ್ದರಿಂದ, ನೀವು ಮಾಡುವ ಸಹಾಯ ನಿಸ್ವಾರ್ಥವಾಗಿರಲಿ. ಸಹಾಯ ಮಾಡುವ ಮೊದಲು, ದಾರಿಯೆಲ್ಲ ಒಂದೇ ಗುರಿ ಸೇರುವುದೆಂಬ ಅರಿವು ನಿಮಗಿರಲಿ.

(ಕೃತಿಶ್ರೇಣಿ | ಸಂ 5,6 & 11)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Responses

Leave a Reply

This site uses Akismet to reduce spam. Learn how your comment data is processed.